Sunday, October 7, 2012

ಮಹದೇವಪುರ ಬಿ.ಬಿ.ಎಂ.ಪಿ ವಲಯದಲ್ಲಿ ಚೇತರಸಿಕೊಂಡ ಎಸ್.ಜೆ.ಎಸ್.ಆರ್.ವೈ.

2009-10ರ ಅವಧಿಯಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯು ಪರಿಷ್ಕೃತವಾಗಿ ಬಂದ ನಂತರ ಈ ಯೋಜನೆಯ ಅನುಷ್ಠಾನ ಬಿ.ಬಿ.ಎಂ.ಪಿಯಲ್ಲಿ ಬಹಳ ಹಿಂದುಳಿದಿತ್ತು. ಉದಾ: ಒಟ್ಟಾರೆ ಬಿ.ಬಿ.ಎಂ.ಪಿಯಲ್ಲಿ 2009-10 ಮತ್ತು 2010-11 ರ ಅವಧಿಯಲ್ಲಿ ಕ್ರಮವಾಗಿ ಶೇಕಡಾ 14% ಮತ್ತು 44% ಮಾತ್ರ ಪ್ರಗತಿಯಾಗಿತ್ತು. ಇದಕ್ಕೆ ಸಿವಿಕ್ ಸಂಸ್ಥೆಯು ಬಿ.ಬಿ.ಎಂ.ಪಿ ಯಲ್ಲಿ ಅಧ್ಯಯನ ಕೈಗೊಂಡಾಗ ಹಲವಾರು ಸಮಸ್ಯೆಗಳು ಕಂಡುಬಂದವು. (ಈ ಸಮಸ್ಯೆಗಳ ಪಟ್ಟಿಯನ್ನು ಈ
http://civiconsjsry.blogspot.in/2012/09/blog-post.html ಲಿಂಕ್ ನಲ್ಲಿ ನೀಡಲಾಗಿದೆ).

ಈ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಎಸ್.ಜೆ.ಎಸ್.ಆರ್.ವೈ ಯೋಜನೆಯಡಿ ರಚನೆಯಾಗಿರುವ ನೆರೆಹೊರೆ ಗುಂಪು, ನೆರೆಹೊರೆ ಸಮಿತಿ ಮತ್ತು ಸಮುದಾಯ ಅಭಿವೃದ್ಧಿ ಸಂಘಗಳ ಸದಸ್ಯರ ಜೊತೆ ಕಾರ್ಯ ನಿರ್ವಹಿಸಿ ಸಮಸ್ಯೆಗಳನ್ನು ಪರಿಹರಿಸಲು ಸಿವಿಕ್ ಸಂಸ್ಥೆಯು ನಿರ್ಧರಿಸಿತು. ಅದರಂತೆ ಬಿ.ಬಿ.ಎಂ.ಪಿ ಎಲ್ಲಾ ವಲಯಗಳಲ್ಲಿ ಅಭಿಯಾನವನ್ನು ಆರಂಭಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮತ್ತು ಕುಂದುಕೊರತೆಗಳ ಅಹವಾಲು ಕಾರ್ಯಕ್ರಮಗಳನ್ನು ಜಂಟಿ ಆಯುಕ್ತರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಬಿ.ಬಿ.ಎಂ.ಪಿ ಮಹದೇವಪುರ ವಲಯದಲ್ಲಿಯೂ ತನ್ನ ಅಭಿಯಾನ ಮುಂದುವರೆಸಿ ಇಲ್ಲಿನ ಸಮುದಾಯ ಅಭಿವೃದ್ಧಿ ಸಂಘದ ಸದಸ್ಯತ್ವವನ್ನೂ ಪಡೆದು ಜನರು ಎದುರಿಸುತ್ತಿದ್ದ ಸಮಸ್ಯೆಗಳು ಪರಿಹಾರವಾಗಲು ವೇದಿಕೆಯಾಗಿ ಕಾರ್ಯ ನಿರ್ವಹಿಸಿತು.

ಮಹದೇವಪುರ ಬಿ.ಬಿ.ಎಂ.ಪಿಯಲ್ಲಿ ಆದ ಕೆಲವು ಬದಲಾವಣೆಗಳು:

  1.  ಸಿ.ಡಿ.ಎಸ್. ಸಭೆಯು ಪ್ರತಿ ತಿಂಗಳೂ ನಡೆಯಬೇಕಿತ್ತು. ಆದರೆ ವರ್ಷಕ್ಕೆ ಒಂದು ಬಾರಿ ಯಾಗುತ್ತಿದ್ದ ಸಿ.ಡಿ.ಎಸ್. ಸಭೆಯು 3 ತಿಂಗಳಿಗೊಮ್ಮೆ ನಡೆಯುತ್ತಿದೆ.
  2.  ಉತ್ತಮ ರೀತಿಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿದ್ದಾರೆ. ಈ ಮೊದಲು ಕ್ರಿಯಾ ಯೋಜನೆಯು ಸರಿಯಾದ ರೀತಿಯಲ್ಲಿರಲಿಲ್ಲ.
  3.  ಅರ್ಜಿ ಹಾಕಿ ಒಂದು ವರ್ಷವಾದರೂ ಸಹ ಸಾಲ ಮತ್ತು ಸಹಾಯಧನ ಬಿಡುಗಡೆಯಾಗುತ್ತಿರಲಿಲ್ಲ. ಆದರೆ ಈಗ ಅರ್ಜಿ ಹಾಕಿದ 3 ತಿಂಗಳುಗಳಲ್ಲಿಯೇ  ಬಿಡುಗಡೆಯಾಗುತ್ತಿದೆ.
  4.  ಈ ಮೊದಲು ಅಧಿಕಾರಿಗಳು ಸಾಲ ಬಿಡುಗಡೆಗಾಗಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಪ್ರತಿನಿತ್ಯ ಸಂಪರ್ಕ ಮಾಡುತ್ತಿರಲಿಲ್ಲ. ಆದರೆ ಈಗ ಇಲಾಖಾ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕಿಸಿ ಸಾಲ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ.
  5.  ಬಿಡುಗಡೆಯಾದ ಹಣ ಈ ಮೊದಲು ಖರ್ಚಾಗುತ್ತಿರಲಿಲ್ಲ. ಆದರೆ ಈಗ ಉತ್ತಮ ರೀತಿಯಲ್ಲಿ ಪ್ರಗತಿಯಾಗುತ್ತಿದೆ.


ಮಹದೇವಪುರ ವಲಯ ವ್ಯಾಪ್ತಿಯ ದೇವಸಂದ್ರ ವಾರ್ಡ್ ನ ರಾಜೀವ್ ಗಾಂಧಿನಗರ ಪ್ರದೇಶದಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಯಶೋಗಾಥೆಗಳು :
ರಾಜೀವ್ಗಾಂಧಿನಗರ ಪ್ರದೇಶದ ಜನರಿಗೆ ಸಿವಿಕ್ ಸಂಸ್ಥೆಯು ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಅರಿವು ಮೂಡಿಸಿದ ಮೇಲೆ ಅಲ್ಲಿನ ಜನರು ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿ ಮಾರ್ಗಸೂಚಿಯ  ಪ್ರಕಾರವೇ ಸಾಲ ಮತ್ತು ಸಹಾಯಧನದ ಮಂಜೂರಾತಿಯನ್ನು ಪಡೆದಿದ್ದಾರೆ.

ಪುಷ್ಟಲತರ ಯಶೋಗಾಥೆ:
ಪುಷ್ಟಲತ ರವರು ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆದ ಮೇಲೆ ಇಲಾಖೆಯಿಂದ ಅರ್ಜಿ ಪಡೆದು 2009-10 ರ ಅವಧಿಯಲ್ಲಿ ಹೋಟೆಲ್ ಉದ್ಯಮಕ್ಕೆಂದು ಅರ್ಜಿ ಸಲ್ಲಿಸಿದರು. ಇವರ ಅರ್ಜಿಯನ್ನು ಸ್ವೀಕರಿಸಿದ ಅಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಸಾಲ ಬಿಡುಗಡೆಗಾಗಿ 3 ತಿಂಗಳ ನಂತರ ನೀಡಿದರು. ಆದರೆ ಬ್ಯಾಂಕ್ ಅಧಿಕಾರಿಗಳು ಪುಷ್ಪಲತರವರಿಗೆ ಟಾರ್ಗೆಟ್ ಮುಗಿದಿದೆ ಎಂದೂ ಮುಂದಿನ ವರ್ಷ ನೀಡುವುದಾಗಿಯೂ ಭರವಸೆ ನೀಡಿದರು. ಅಲ್ಲದೆ ಸಾಲ ಬಿಡುಗಡೆ ಮಾಡಬೇಕಾದರೆ ಸಾಲಕ್ಕೆ ಭದ್ರತೆ ಕೊಡಬೇಕಾಗುತ್ತದೆ ಎಂದೂ ಸಹ ಹೇಳಿದರು.

ಪುಷ್ಪಲತ ರವರು ಈ ಸಮಸ್ಯೆಗಳನ್ನು ಮಹದೇವಪುರ ವಲಯ ಜಂಟಿ ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳೂ ಸಹ ಪುನಃ ಹೊಸ ಅರ್ಜಿಯನ್ನು ಹಾಕಬೇಕೆಂದು ತಿಳಿಸಿದರು. ಆದರೆ ಈ ಎಲ್ಲಾ ಸಮಸ್ಯೆಗಳನ್ನೂ ಪುಷ್ಪಲತರವರು ಪ್ರತಿಯೊಂದು ಹಂತದಲ್ಲಿಯೂ ಪ್ರಶ್ನಿಸುತ್ತಾ ಬಂದರು.

ಪುಷ್ಪಲತರವರು ಇಟ್ಟ ದಿಟ್ಟ ಹೆಜ್ಜೆಗಳು :
  •  ಹೊಸ ಅರ್ಜಿಯನ್ನು ನೀಡಿ ಎಂದಾಗ ಪುಷ್ಪಲತರವರು ಹೊಸ ಅರ್ಜಿಯನ್ನು ಯಾಕೆ ನೀಡಬೇಕು? ಕೊಟ್ಟ ಅರ್ಜಿಯನ್ನು ಏನು ಮಾಡಿದ್ದೀರಿ? ಹೊಸ ಅರ್ಜಿಯನ್ನು ನೀಡುವುದಿಲ್ಲ ಎಂದು ಪ್ರಶ್ನೆ ಮಾಡಿ, ಈ ಮೊದಲು ನೀಡಿದ ಅರ್ಜಿಯನ್ನೇ ಈ ವರ್ಷವೂ ಪರಿಗಣಿಸಬೇಕೆಂದು ಒತ್ತಾಯಿಸಿದರು. ಅಧಿಕಾರಿಗಳು ಮೊದಲು ಇವರ ಮಾತನ್ನು ನಿರ್ಲಕ್ಷಿಸಿದರೂ ಇವರ ಪ್ರಶ್ನೆಗಳಿಗೆ ಉತ್ತರ ನೀಡಲು ಆಗದೆ ಈ ಮೊದಲು ನೀಡಿದ ಅರ್ಜಿಯನ್ನೇ ಪರಿಗಣಿಸಲು ನಿರ್ಧರಿಸಿದರು.
  •  ಇವರು ಪ್ರಶ್ನಿಸಿದ ಮೇಲೆ ಇದೇ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಹಲವಾರು ಜನರಿಗೂ ಸಹ ಹೊಸ ಅರ್ಜಿಯನ್ನು ನೀಡಲು ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  •  ಸಾಲಕ್ಕೆ ಭಧ್ರತೆಯನ್ನು ಕೇಳಿದ ಬ್ಯಾಂಕ್ ಅಧಿಕಾರಿಗಳ ವಿರುಧ್ಧ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯ ಮುಖ್ಯಸ್ಥರನ್ನು ಭೇಟಿ ಮಾಡಿದರು. ಆ ನಂತರ ರಾಜ್ಯಮಟ್ಟದ ಬ್ಯಾಂಕುಗಳ ಸಮಿತಿಯ ಮುಖ್ಯಸ್ಥರು ಸಾಲಕ್ಕೆ ಭಧ್ರತೆಯನ್ನು ಕೇಳಬಾರದೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈಗ ಪುಷ್ಪಲತವರಿಗೆ ಸಾಲ ಮತ್ತು ಸಹಾಯಧನ ಸೇರಿ 1 ಲಕ್ಷ ರೂ. ಯಾವುದೇ ಭದ್ರೆತೆ ಇಲ್ಲದೆ ಬಿಡುಗಡೆ ಮಾಡಲಾಗಿದೆ.

ಇದೇ ರೀತಿಯಾಗಿ ರಾಜೀವ್ ಗಾಂಧಿನಗರದ ಮತ್ತಿಬ್ಬರು ಅರ್ಜಿ ಸಲ್ಲಿಸಿ ಸಾಲ ಮತ್ತು ಸಹಾಯಧನವನ್ನು ಪಡೆದಿದ್ದಾರೆ. ಇವರಲ್ಲಿ ಮಂಜುಳಾ ರವರು ಸೀರೆ ವ್ಯಾಪಾರಕ್ಕೆಂದು ಅರ್ಜಿ ಸಲ್ಲಿಸಿ 1 ಲಕ್ಷ ರೂ ಸಾಲ ಮತ್ತು ಸಹಾಯಧನವನ್ನು ಪಡೆದಿದ್ದಾರೆ. ಹಾಗೆಯೇ ಕುಮಾರ್ ಎಂಬುವವರು ಪೀಠೋಪಕರಣಗಳ ತಯಾರಿಕಾ ಉದ್ಯಮಕ್ಕೆ ಅರ್ಜಿ ಸಲ್ಲಿಸಿ 2 ಲಕ್ಷ ರೂ. ಸಾಲ ಮತ್ತು ಸಹಾಯಧನವನ್ನು ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಭಧ್ರತೆಯನ್ನು ಕೇಳಿದರೂ ಸಹ ಮಾರ್ಗಸೂಚಿಯಲ್ಲಿ ತಿಳಿಸಿರುವ ಪ್ರಕಾರ ಈ ಯೋಜನೆಯಡಿಯಲ್ಲಿ ಪಡೆದ ಸಾಲಕ್ಕೆ ಭದ್ರತೆಯನ್ನು ನೀಡುವಂತಿಲ್ಲ ಎಂದು ಪ್ರಶ್ನಿಸಿ ತಮ್ಮ ಹಕ್ಕನ್ನು ಚಲಾಯಿಸಿ ಭದ್ರತೆಯನ್ನು ನೀಡದೆ ಸಾಲವನ್ನು ಪಡೆದಿದ್ದಾರೆ.



 

Monday, September 24, 2012

ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯು(ಎಸ್.ಜೆ.ಎಸ್.ಅರ್.ವೈ) ಬಿ.ಬಿ.ಎಂ.ಪಿಯಲ್ಲಿ ಈಗ ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ. ಇದು ಸಿವಿಕ್ ಸಂಸ್ಥೆಯ ಶ್ರಮದ ಫಲ :

ಹಿನ್ನಲೆ :
ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಎಲ್ಲಾ ನಗರ ಪ್ರದೇಶಗಳಲ್ಲಿನ ಬಡತನವನ್ನು ನಿವಾರಿಸಲು  1997 ಡಿಸೆಂಬರ್ ನಲ್ಲಿ ಬಂದಂತಹ ಒಂದು ಉತ್ತಮ ಯೋಜನೆ. ಆದರೆ ಈ ಯೋಜನೆಯ ಅನುಷ್ಠಾನ ಬಿ.ಬಿ.ಎಂ.ಪಿ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ತುಂಬಾ ಹಿಂದುಳಿದಿತ್ತು. 2009 ರಲ್ಲಿ ಸಿವಿಕ್ ಸಂಸ್ಥೆಯು ಈ ಯೋಜನೆಯ ಅನುಷ್ಠಾನದ ಬಗ್ಗೆ ಬಿ.ಬಿ.ಎಂ.ಪಿಯಲ್ಲಿ ಅಧ್ಯಯನ ನಡೆಸಿ ಈ ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ಪ್ರಯತ್ನಿಸಿತು. ಅಧ್ಯಯನ ನಡೆಸಿದಾಗ ಈ ಕೆಳಕಂಡ ಸಮಸ್ಯೆಗಳು ಕಂಡುಬಂದವು.

ಸಿವಿಕ್ ಕೈಗೊಂಡ ಅಧ್ಯಯನದಲ್ಲಿ ಕಂಡುಬಂದ ಸಮಸ್ಯೆಗಳು :
1. ಅರಿವಿ(ಜ್ಞಾನ)ನ ಕೊರತೆ: ಬಿ.ಬಿ.ಎಂ.ಪಿಯಲ್ಲಿ ಈ ಯೋಜನೆಯ ಅಸ್ತಿತ್ವದ ಬಗ್ಗೆ ಯಾವುದೇ ರೀತಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯ ಮಟ್ಟದಲ್ಲಿ ಹಮ್ಮಿಕೊಂಡಿರಲಿಲ್ಲ. ಇದರ ಬಗ್ಗೆ ಕನ್ನಡದಲ್ಲಿ ಯಾವುದೇ ಮಾಹಿತಿ ಕೈಪಿಡಿ ಇರಲಿಲ್ಲ.
2. ಸಾಲಕ್ಕೆ ಭಧ್ರತೆ ಕೇಳುತ್ತಿದ್ದ ಬ್ಯಾಂಕ್ ಅಧಿಕಾರಿಗಳು: ಈ ಯೋಜನೆಯಡಿಯಲ್ಲಿ ಸ್ವ ಉದ್ಯೋಗವನ್ನು ಕೈಗೊಳ್ಳಲು ಗರಿಷ್ಠ 2 ಲಕ್ಷ ರೂ. ವನ್ನು (ಸಾಲ ಮತ್ತು ಸಹಾಯಧನ ಸೇರಿ) ವೈಯಕ್ತಿಕವಾಗಿ ಪಡೆಯುವ ಅವಕಾಶವಿದೆ. ಆದರೆ ಮಾರ್ಗಸೂಚಿಯಲ್ಲಿ ಈ ಸಾಲಕ್ಕೆ ಯಾವುದೇ ರೀತಿಯ ಭದ್ತೆಯನ್ನು ನೀಡುವಂತಿಲ್ಲ ಹಾಗೂ ಭದ್ರತೆಯನ್ನು ಕೇಳುವಂತಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ. ಆದರೂ ಶೇ.80 ರಷ್ಟು ಬ್ಯಾಂಕಿನ ಅಧಿಕಾರಿಗಳು ಸಾಲಕ್ಕೆ ಭದ್ರತೆಯನ್ನು ಕೇಳುತ್ತಿದ್ದರು.
3. ಅರ್ಜಿಯನ್ನು ವಿಲೇವಾರಿ ಮಾಡಲು ಸಮಯ ನಿಗದಿ ಇರಲಿಲ್ಲ: ಅರ್ಜಿ ಹಾಕಿ 1 ವರ್ಷವಾದರೂ ಈ ಯೋಜನೆಯ ಸೌಲಭ್ಯ ಸಿಗುತ್ತಿರಲಿಲ್ಲ ಮತ್ತು ಆ ಅರ್ಜಿ ಯಾವ ಹಂತದಲ್ಲಿದೆ ಎಂಬುದರ ಮಾಹಿತಿಯೂ ಯಾರೂ ನೀಡುತ್ತಿರಲಿಲ್ಲ. ಬ್ಯಾಂಕು ಮತ್ತು ಇಲಾಖಾ ಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿರಲಿಲ್ಲ.
4.ಈ ಯೋಜನೆಯ ಮೇಲುಸ್ತುವಾರಿಗಾಗಿ ಸಮುದಾಯ ಮಟ್ಟದಲ್ಲಿ ಸಿ.ಡಿ.ಎಸ್(ಸಮುದಾಯ ಅಭಿವೃದ್ಧಿ ಸಂಘ ರಚನೆಯಾಗಿದ್ದು, ಇದು ಪ್ರತಿ ತಿಂಗಳೂ ಸಭೆ ಸೇರಬೇಕು. ಆದರೆ ಪ್ರತಿ ತಿಂಗಳೂ ಬಹಳಷ್ಟು ಬಿ.ಬಿ.ಎಂ.ಪಿ ವಲಯಗಳಲ್ಲಿ ಸಭೆ ಸೇರುತ್ತಿರಲಿಲ್ಲ.
5. ಈ ಸಿ.ಡಿ.ಎಸ್. ಸಭೆಗಾಗಿ 1000 ರೂ. ಇದ್ದು, ಸಭೆ ನಡೆದರೂ ಈ ಹಣವನ್ನು ಖರ್ಚು ಮಾಡುತ್ತಿರಲಿಲ್ಲ.
6. ಈ ಸಮಸ್ಯೆಗಳ ಜೊತೆಗೆ ಹಲವಾರು ಸಮಸ್ಯೆಗಳನ್ನು  (ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಅನ್ನು ಸಂಪರ್ಕಿಸಿ-
http://civiconsjsry.blogspot.in/2011/12/04-03-11-10-30-2.html ಸಮುದಾಯದ ಜನರು ಎದುರಿಸುತ್ತಿದ್ದು, ಈ ಸಮಸ್ಯೆಗಳಿಂದಾಗಿ ಎಸ್.ಜೆ.ಎಸ್.ಆರ್.ವೈ ಯೋಜನೆಯು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿರಲಿಲ್ಲ.


ನಗರ ಮಟ್ಟದಲ್ಲಿ ಸಿವಿಕ್ ಬೆಂಗಳೂರು ಸಂಸ್ಥೆಯು ಕಾರ್ಯ ವಿರ್ವಹಿಸಿದ ಮೇಲೆ ಆದ ಯಶಸ್ವೀ ಬದಲಾವಣೆಗಳು:
1. ಬಿ.ಬಿ.ಎಂ.ಪಿಯ 7 ವಲಯಗಳಲ್ಲಿ ಸಮುದಾಯದ ಮಟ್ಟದಲ್ಲಿ ಅಧಿಕಾರಿಗಳ ಸಹಯೋಗದೊಂದಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
2. ಈ ಯೋಜನೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಲಯ ಜಂಟಿ ಆಯುಕ್ತರ ಅಧ್ಯಕ್ಷತೆದಲ್ಲಿ ಕುಂದುಕೊರತೆಗಳ ಅಹವಾಲು ಸಭೆಯನ್ನು 7 ಬಿ.ಬಿ.ಎಂ.ಪಿ ವಲಯಗಳಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ಬಂದ ಜಂಟಿ ಆಯುಕ್ತರು ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ.
3. ಕನ್ನಡದಲ್ಲಿ ಮಾಹಿತಿ ಕೈಪಿಡಿ ಇಲ್ಲದಿರುವ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಮತ್ತು ಬಿ.ಬಿ.ಎಂ.ಪಿಯ ಗಮನಕ್ಕೆ ತಂದ ನಂತರ ಪೌರಾಡಳಿತ ನಿರ್ದೇಶನಾಲಯವು ಕರ್ನಾಟಕದ 205 ನಗರ ಪ್ರದೇಶಗಳಿಗೆಲ್ಲಾ ಎಷ್ಟು ಪುಸ್ತಕ ಬೇಕಾಗಿದೆ ಎಂದು ಪತ್ರಗಳನ್ನು ಬರೆದು ನಂತರ ಪುಸ್ತಕವನ್ನು ಮುದ್ರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ.
4.  ಬ್ಯಾಂಕುಗಳ ಸಮಸ್ಯೆಗಳನ್ನು ಬೆಂಗಳೂರು ನಗರದ ಲೀಡ್ ಬ್ಯಾಂಕ್ ಮ್ಯಾನೇಜರ್ ಮತ್ತು ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯ ಮುಖ್ಯಸ್ಥರ ಗಮನಕ್ಕೆ ತಂದ ನಂತರ ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯು ಎಲ್ಲಾ ಬ್ಯಾಂಕುಗಳಿಗೆ ಶೀಘ್ರ ಅರ್ಜಿಗಳನ್ನು ವಿಲೇವಾರಿ ಮಾಡಲು ಸಮಯ ನಿಗದಿ ಮಾಡಿ ಸುತ್ತೋಲೆಯನ್ನು ಕಳುಹಿಸಿದೆ ಮತ್ತು ಎಲ್ಲಾ ಬ್ಯಾಂಕುಗಳಿಗೆ ಸಾಲಕ್ಕೆ ಭದ್ರತೆಯನ್ನು ಕೇಳದಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.(ಇದರ ಬಗ್ಗೆ ಇರುವ ಆದೇಶದ ಪ್ರತಿಯನ್ನು ಈ ಕೆಳಗೆ ನೀಡಲಾಗಿದೆ).
5.  ಬಿ.ಬಿ.ಎಂ.ಪಿ 6 ವಲಯಗಳಲ್ಲಿ ಪ್ರತಿ ತಿಂಗಳೂ ಸಿ.ಡಿ.ಎಸ್ ಸಭೆಗಳು ನಡೆಯುತ್ತಿವೆ.
6. ಎಲ್ಲಾ ವಲಯಗಳಲ್ಲಿ ಈಗ ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ. ಬಿಡುಗಡೆಯಾದ ಹಣವು ಸಹ ವರ್ಷದಿಂದ ವರ್ಷಕ್ಕೆ  ಉತ್ತಮ ಪ್ರಗತಿಯಿಂದ ಖಚರ್ಾಗುತ್ತಿದೆ.
ಉದಾ:
ವರ್ಷ             ಬಿಡುಗಡೆಯಾದ ಹಣ           ಖರ್ಚಾದ ಹಣ          ಶೇಕಡಾವಾರು   
2009-10            669 ಲಕ್ಷ                            92.8 ಲಕ್ಷ                          14%   
2010-11            683 ಲಕ್ಷ                              291 ಲಕ್ಷ                            44%   
2011-12           659 ಲಕ್ಷ                              592 ಲಕ್ಷ                           90%    


ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿ(ಎಸ್.ಎಲ್.ಬಿ.ಸಿ) ಯ ಆದೇಶದ ಪ್ರತಿ